-ವೀರಣ್ಣ ಮಂಠಾಳಕರ್
ನಿನ್ನ ಬಗ್ಗೆ ನನ್ನೊಳಗೆ ಬೇಸರವಿಲ್ಲ. ನಿರಾಸೆಯಂತೂ ಇಲ್ಲವೇ ಇಲ್ಲ. ಪ್ರೀತಿಸದಿದ್ದರೇನಂತೆ...? ಪ್ರೀತಿಗಿಂತ ನಿನ್ನೊಳಗೆ ಅಭಿಮಾನ ಇರುವುದನ್ನು ಕಂಡು ಹೆಮ್ಮೆ ಎನಿಸುತ್ತಿದೆ. ಅಚ್ಚರಿಯ ಮಾತೊಂದು ನಿನಗೆ ಹೇಳಲೇಬೇಕು. ನನ್ನೀ ಸ್ಥಾನದಲ್ಲಿ ಬೇರೆ ಯಾರೇ ಆಗಿದ್ದರೂ ನಿನ್ನನ್ನು ಪ್ರಪೋಸ್ ಮಾಡಿಯೇ ಮಾಡುತಿದ್ದರು. ಆದರೆ ನಾನು ಪೂರ್ವಾಪರ ಯೋಚನೆಯನ್ನು ಮಾಡದೇ ಹಾಗೆಲ್ಲ ಮಾಡುವಂತಿರಲಿಲ್ಲ.
ಹಾಗಂತಲೇ ನಿನಗೆ ಮೊದಲು ಪ್ರಪೋಸ್ ಮಾಡುವುದಕ್ಕೆ ಮನಸ್ಸು ಕೂಡ ಒಪ್ಪಿರಲಿಲ್ಲ. ಬದಲಾಗಿ ನಿನ್ನ ಬಗ್ಗೆ ನನ್ನಲ್ಲಿ ಅದೆಂಥದೋ ಹುಚ್ಚು ಪ್ರೀತಿಯ ಸೆಳೆತವಿತ್ತು. ನಿನ್ನ ಕಂಡ ಕ್ಷಣದಿಂದಲೂ ಹೇಳಬೇಕೆಂದುಕೊಂಡಿರುವ ಮಾತುಗಳೆಲ್ಲ ಮೌನವಾಗಿ ಬಿಟ್ಟವು. ನಿನಗಾಗಿ ಧ್ಯಾನಿಸುತಿದ್ದ ವಿಚಾರಗಳೆಲ್ಲ ಕವಿತೆಗಳಾಗಿ ಬಿಟ್ಟವು. ಇನ್ನುಳಿದ ನಮ್ಮಿಬ್ಬರ ಸಂಬಂಧದ ನಡುವೆ ದುರಂತ ಕಥೆಯೊಂದು ಹುಟ್ಟಿಕೊಳ್ಳುವುದಕ್ಕಿಂತ ಮುಂಚೆ ಮನಸ್ಸುಗಳ ತಲ್ಲಣಗಳಿಗೆ ಅಂತ್ಯವನ್ನು ಹಾಡಬೇಕಿತ್ತು.
ಯಾಕೆಂದರೆ ಬದುಕಿನ ಹತ್ತು ಹಲವು ಜವಾಬ್ದಾರಿಗಳು ಎಲ್ಲರಿಗಿರುವಂತೆ ನನಗೂ ಒತ್ತಡದ ಜೀವನದಲ್ಲಿ ಸಾಕಷ್ಟಿದ್ದವು. ಹಾಗಂತ ನಿನ್ನನ್ನು ನಿರ್ಲಕ್ಷಿಸಬೇಕೆಂಬುದು ಮನಸ್ಸಾಕ್ಷಿಗೆ ಒಪ್ಪಿಗೆಯಾಗಲಿಲ್ಲ. ಅದಕ್ಕಾಗಿಯೇ ನೀನಿಲ್ಲದೇ ಹೋದರೆ ಏನೆಲ್ಲ ಕಳೆದುಕೊಳ್ಳುತಿದ್ದೇನೆ ಎಂಬ ಭಾವನೆ ಮೂಡಿತ್ತು. ನೇರವಾಗಿ ಕೇಳಿಯಾದರೂ ನಿನ್ನ ಅಭಿಪ್ರಾಯವನ್ನು ಕೇಳಿ ತಿಳಿದುಕೊಳ್ಳೋಣ ಎಂದುಕೊಂಡೆ. ಅಷ್ಟೊತ್ತಿಗಾಗಲೇ ನನ್ನೆಡೆ ಇದ್ದಂಥ ಸೆಳೆತವನ್ನು ಜಾರಿಕೊಂಡು ಹೋಗಿರುವುದು ನನಗೆ ಅರಿವಾಗಿರಲಿಲ್ಲ. ತುಂಬಾ ತಡವಾಗಿಯೇ ನಿನ್ನಾ ಮನದ ಭಾವನೆಗಳ ಅಲೆಗಳಲ್ಲಿ ಬಂದು ಒಂದಾಗುವ ಕನಸು ಭಗ್ನಗೊಂಡಿತ್ತು.
ನನಗಿರುವಷ್ಟು ಧೈರ್ಯ ನಿನಗೆ ಆ ಸಮಯದಲ್ಲಿ ಇದ್ದಿದ್ದರೆ ಏನಾಗುತಿತ್ತೋ ಗೊತ್ತಿರಲಿಲ್ಲ ಗೆಳತಿ. ಆದರೆ ಪ್ರೀತಿಯ ಕೋರಿಕೆಯೊಂದು ತಂದುಕೊಂಡು ಬಂದು, ನಿನ್ನ ಮುಂದೆ ನಿಂತಾಗ ನನಗಾಗಿ ನೀನು ಇಟ್ಟುಕೊಂಡಿರುವ ಗೌರವ ಭಾವನೆ ಕಂಡು ಒಂದು ಕ್ಷಣ ಮೂಕವಿಸ್ಮಿತನಾದೆ. ಈಗ ಹೇಳು. ಹೇಗೆ ಪ್ರೀತಿಸಲಿ ನಿನ್ನ...? ಆರಾಧಿಸುತ್ತೇನೆ. ಅಭಿನಂದಿಸುತ್ತೇನೆ. ಪೂಜಿಸುತ್ತೇನೆ ನಿನ್ನ. ಚಿರಋಣಿಯಾಗಿ ಸದಾ ನಿನ್ನಾ ನೆನಪುಗಳಲ್ಲಿರುತ್ತೇನೆ ಎಂದಷ್ಟೇ ಹೇಳಬಲ್ಲೆ. ನನ್ನೀ ಜೀವನದಲ್ಲಿ ಈಗ ನೀನಿರದಿದ್ದರೇನಂತೆ, ನೀನೆಲ್ಲೇ ಇದ್ದರೂ ಸೌಖ್ಯವಾಗಿರು, ಕ್ಷೇಮವಾಗಿರು ಅಂತಷ್ಟೇ ಆಶಿಸುವೆ.
(ಹೆಣ್ಣೆಂದರೆ ಬರೀ ಪ್ರೀತಿ-ಪ್ರೇಮಕ್ಕಾಗಿ ಅಲ್ಲ. ಕಾಮತೃಷೆಗಾಗಿಯೂ ಅಲ್ಲ. ಅವಳೊಂದು ಕರುಣಾಮಯಿ, ತ್ಯಾಗದ ಪ್ರತೀಕ ಅವಳು. ಪ್ರೇಮ ದೇವತೆಯಾಗಿ ಕೆಲವರ ದೃಷ್ಟಿಯಲ್ಲಿ ಕಂಡರೆ, ಪೂಜ್ಯನೀಯ ಭಾವನಾಜೀವಿ ಅವಳು. ಅವಳ ಮುಖದ ಕಾಂತಿಯಲ್ಲಿ ಸದಾ ಶಾಂತಿಯನ್ನು ಪ್ರಜ್ವಲಿಸುತ್ತದೆ. ಗೌರವದ ಸಂಕೇತವಾಗಿ ಉಳಿಯುವ ಹೆಣ್ಣನ್ನು ಪ್ರತಿಯೊಬ್ಬರು ರಕ್ಷಿಸಬೇಕಿದೆ. ಪ್ರಸ್ತುತ ದಿನಮಾನಗಳಲ್ಲಿ ನಡೆಯುತ್ತಿರುವ ಅನ್ಯಾಯ, ಅತ್ಯಾಚಾರ, ಶೋಷಣೆಗೆ ನಲುಗಿ ಹೋಗಿದ್ದಾಳೆ. ದುಷ್ಟ ಜನರ ದುರಾಡಳಿತಕ್ಕೆ ಬಳಕೆ ಮಾಡಿಕೊಳ್ಳುತ್ತಿರುವವರ ಪಾಲಿಗವಳು ಸಿಂಹ ಸ್ವಪ್ನವಾಗಬೇಕಿದೆ. ಹೆಣ್ಣನ್ನು ಶೋಷಿಸದೇ, ಹಿಂಸಿಸದೇ ಸಾಧಿಸುವ ಛಲಕ್ಕಾಗಿ ಅವಳನ್ನು ಬೆನ್ನೆಲುಬಾಗಿ ಇಟ್ಟುಕೊಳ್ಳಬೇಕಾಗಿದೆ. ಪ್ರತಿಯೊಬ್ಬರ ಯಶಸ್ಸಿನ ಹಿಂದೊಬ್ಬಳು ಹೆಣ್ಣಿರುತ್ತಾಳೆ ಎಂಬ ಸತ್ಯವನ್ನು ಮರೆಯಬಾರದು.
ಪ್ರೀತಿ-ಪ್ರೇಮದ ನೆಪದಲ್ಲಿ ಪ್ರಚಲಿತ ದಿನಮಾನಗಳಲ್ಲಿ ಅವಳ ಮೇಲಾಗುತ್ತಿರುವ ಅಪಮಾನ, ಅವಮಾನಗಳಿಗೆಲ್ಲ ಯಾರು ಹೊಣೆ? ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ನಮಗೆ ಬೇಕಾಗಿರುವ ಪ್ರೀತಿಯನ್ನು ಸಿಗದಿದ್ದರೂ ಚಿಂತೆ ಮಾಡದೇ, ಇನ್ನೊಬ್ಬರ ಜೀವನಕ್ಕೆ ನಮ್ಮಿಂದ ಚಿತೆಯನ್ನಾಗಿಸದೇ ಅವರವರ ಬಾಳನ್ನು ಅವರು ಹಸನಾಗಿಸಿಕೊಳ್ಳಲು ಮತ್ತು ಎಲ್ಲರೂ ನೆಮ್ಮದಿಯಿಂದ ಬದುಕಲು ಮುಂದಾಲೋಚನೆ ಮಾಡಿದರೆ ಎಂಥಾ ಚೆಂದ..!! ಹೀಗೆ ಪ್ರತಿಯೊಬ್ಬರು ಚಿಂತಿಸುವಂತಾಗಬೇಕು ಎಂಬ ಆಸೆ. ಅವಳು ಅವನಿಗೆ ಸಿಗಲಿಲ್ಲ, ಅವನು ಅವಳಿಗೆ ಸಿಗಲಿಲ್ಲ ಎಂಬ ವ್ಯರ್ಥ ಆಲೋಚನೆಗಳನ್ನು ಬಿಟ್ಟು, ಪಾಲಿಗೆ ಬಂದದ್ದು ಪಂಚಾಮೃತ ಎಂದು ಸ್ವೀಕರಿಸಿ ಬಾಳಿದರೆ ಜೀವನ ಅದೆಂಥ ಸುಂದರಮಯವಾಗಿರೋದು.
ಇಂತಹ ವಿಚಾರ ಲಹರಿಯನ್ನು ನಮ್ಮೊಳಗೆ ನಾವು ಹರಿಯಬಿಡುವಂತಾಗಬೇಕು. ಇದರಿಂದ ಒಂದಿಷ್ಟಾದರೂ ನಮಗೆ ನಾವು ಬದಲಾಗಬಹುದಾ ಎಂಬ ಯೋಚನೆ ಬಂದು ಹೋದರೆ ತಪ್ಪೇನಿಲ್ಲ. ಇದರಿಂದ ಆತ್ಮಹತ್ಯೆ (ಸೂಸೈಡ್), ದ್ವೇಷ ಭಾವನೆಯನ್ನು ತ್ಯಜಿಸಿ, ಕೆಟ್ಟ ಆಲೋಚನೆಗಳಿಂದ ದೂರವಿರಲು ಒಂದಿಷ್ಟು ಸಹಕಾರಿಯಾಗಬಹುದು ಎಂಬ ನಂಬಿಕೆ ನನ್ನದು.
ಯಾರಿಗೂ, ಯಾರನ್ನೂ ಈ ವಿಚಾರಗಳನ್ನೆಲ್ಲ ಸೂಚನೆ, ಮಾರ್ಗದರ್ಶನ ಎಂದು ತಿಳಿಯುವುದು ಬೇಡ. ಆದರೆ ಸಮಾಜದಲ್ಲಿನ ಯುವ ಜನಾಂಗ ಒಂದಿಷ್ಟು ಬದಲಾದರೆ ಯಾರೂ ಬೇಡ ಅನ್ನುವುದಿಲ್ಲ. ನಮ್ಮ ಸಮಯ, ಸಾಮಥ್ರ್ಯ, ಪ್ರತಿಭೆಯನ್ನು ಮರ ಸುತ್ತುವುದಕ್ಕೆ, ಭಾವನೆಗಳನ್ನೆಲ್ಲ ಗಾಳಿಯಲ್ಲಿ ತೇಲಿಬಿಟ್ಟು ಅಮೂಲ್ಯವಾದ ಜೀವನ ವ್ಯರ್ಥವಾಗಿ ಕಳೆಯುವುದಕ್ಕಿಂತ ಸಾಧನೆಯ ಶಿಖರವನ್ನೇರಲು ಖರ್ಚು ಮಾಡಿದರೆ ಹೇಗೆ...? ಎಂಬ ಚಿಂತನ-ಮಂಥನ ನಡೆಯುವಂತಾಗಲಿ.
-ವೀರಣ್ಣ ಮಂಠಾಳಕರ್
ಮನಸ್ಸೆಂಬ ಭಾವನೆಗಳಲ್ಲಿ ಗೀಚಿದ ಗೇರೆಗಳು.